ದಲಿತ ಸಾಹಿತ್ಯ ಚಳುವಳಿ ಸುನೀತಾ ಮಿರಾಶಿ ಸಂಶೋಧನಾ ವಿದ್ಯಾರ್ಥಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ, ಬೆಳಗಾವಿ-591156 ಮೊ: 8095663788 ಇ-ಮೇಲ್: suneetamirashi@gmail.com ಮಾರ್ಗದರ್ಶಕರು : ಡಾ.ವೈ.ಬಿ.ಹಿಮ್ಮಡಿ ಸಹ ಪ್ರಧ್ಯಾಪಕರು ಎಸ್.ಪಿ.ಎಂ. ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ರಾಯಬಾಗ. ಜಾಗತಿಕರಣದ ವಿರಾಟ್ ಸ್ವರೂಪದ ತಿಮಿರಿನಲ್ಲಿ ಸಾಹಿತ್ಯ ಮುಖಾಮುಖಿಯಾಗುತ್ತಿದೆ. ಈ ಹೊತ್ತಿನಲ್ಲಿ ದಲಿತ ಬಂಡಾಯ ಸಾಹಿತ್ಯ ಗೌಣವಾಗುತ್ತದೆಯೇ ಎಂಬ ತುಗುಡತೆ ಬಡಿದೆಬ್ಬಿಸುತ್ತದೆ. ಇತ್ತೀಚೆಗೆ ನಮ್ಮ ವಿದ್ವಾಂಸರ ಸಾಹಿತ್ಯ ಚಿಂತಕರ ಚಾವಡಿಯಲ್ಲಿ ಮೌಲ್ಯಯುತವಾದ ಚರ್ಚೆಗಳು ಅತ್ತ ನುಂಗಲೂ ಆಗದೆ ಒದ್ದಾಡುವಂತಾಗುತ್ತಿದೆ. ವ್ಯವಸ್ಥೆ ಮತ್ತು ಹಿಂಸೆ ಪದಗಳು ಮೌಲ್ಯಯುತ ಒಂದು ರೀತಿಯಲ್ಲಿ ಕರಳುಬಳ್ಳಿಯ ಸಂಬಂಧವನ್ನು ನಿರಂತರವಾಗಿ ಉಳಿಸಿಕೊಂಡು ಮುಂದುವರೆಯುತ್ತವೆ. ವ್ಯವಸ್ಥೆಯ ತೆಕ್ಕೆಯಲ್ಲಿ ಅನುಗುಣವಾದ ಹಿಂಸೆ ಸ್ವತಃ ಹುಟ್ಟುತ್ತದೆ. ಇಲ್ಲದಿದ್ದರೆ ಹಿಂಸೆ ಎಂಬ ಮೊನಚು ಅಲ್ಲಿ ಬೆಳೆದಿರುತ್ತದೆ. ಆದುದರಿಂದ ಹಿಂಸೆಯು ರೂಪಾಂತರಗೊಂಡಂತೆ ಹಿಂಸೆಯ ವಿರಾಟ್ ಸ್ವರೂಪ ಕ್ಷಣ ಕ್ಷಣಕ್ಕೂ ಬದಲಾವಣೆಯನ್ನು ಪಡೆಯುತ್ತಿರುತ್ತದೆ. ದಲಿತ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವಿಶೇಷ ಚರ್ಚೆಗೀಡಾದ ಪದ ‘ದಲಿತ ಸಾಹಿತ್ಯ ಸಂಘ’ ‘ದಲಿತ ಸಾಹಿತಿಗಳ ಸಮಾಲೋಚನೆಗಳು’ ‘ದಲಿತ ಸಮ್ಮೇಳನಗಳು’ ದಲಿತ ಸಾಹಿತ್ಯ ಚಳುವಳಿಗೆ ಸೈಧ್ದಾಂತಿಕ ನೆಲೆಗಟ್ಟನ್ನು ಒದಗಿಸಿದವು. ‘ದಲಿತ’ ಪದವು ಶೋಷಿತರನ್ನೆಲ್ಲ ಒಳಗೊಳ್ಳುವಂಥದು. ದಲಿತ ಸಾಹಿತ್ಯ ಚಳುವಳಿ ಎಂದರೆ ಶೋಷಿತರ ಸಾಹಿತ್ಯ ಚಳುಚಳಿ ದಲಿತರೆಂದರೆ ಜಾತಿ ವ್ಯವಸ್ಥೆ ಮತ್ತು ಅದರ ಸಮಗ್ರ ವೈಚಾರಿಕ ವ್ಯವಸ್ಥೆಯನ್ನು ನಾಶಮಾಡ ಬಯಸುವವರು ಹಾಗೂ ಈ ಜಗತ್ತು ಮತ್ತು ಜೀವನವನ್ನು ಹೊಸ ದೃಷ್ಟಿಯಿಂದ ಕಟ್ಟಬಯಸುವವರು. ಪ್ರಜ್ಞಾವಂತ ಮತ್ತು ಪ್ರಳಯಕಾರಿ ದಲಿತನಿಂದ ಇವತ್ತಿನ ಸಮಾಜದ ಪುನಹ ನಿರ್ಮಾಣದ ಚಿಂತನೆಗಾಗಿ ಆತನಿಗೆ ಹೊಸ ‘ಶಸ್ತ್ರಗಳು’, ‘ಶಾಸ್ತ್ರಗಳು’ ಉಪಲಬ್ಧವಾಗಿವೆ. ಅಸ್ಪøಶ್ಯರಂತೆ ಆರ್ಥಿಕ, ಸಮಾಜಿಕ, ರಾಜಕೀಯ ರಂಗದಲ್ಲಿ ಶೋಷಣೆಗೆ ಒಳಗಾದ ಜನರೆಲ್ಲಾ ಸೇರಿ ದಲಿತರಾಗುತ್ತಾರೆ. ದಲಿತರು ಕೇವಲ ದಲಿತರಷ್ಟೇ ಅಲ್ಲ ಶೋಷಣೆ ಜೊತೆಗೆ ಅಮಾನವೀಯವಾದ ಹಿಂಸೆ ಕ್ರೌರ್ಯಗಳಿಗೆ ಒಳಗಾದವರು, ಒಂದು ವ್ಯಕ್ತಿತ್ವವೇ ಇಲ್ಲದವರಂತೆ ನಡೆಸಿಕೊಳ್ಳಲ್ಪಟ್ಟವರಾಗಿದ್ದಾರೆ. ಅಸ್ಪøಶ್ಯ ಜನಾಂಗವನ್ನು ಗುರುತಿಸುವುದಕ್ಕಾಗಿ ಕರೆಯುವುದಕ್ಕಾಗಿ ಈ ಮೊದಲಿದ್ದ ಆದಿಮ ಜನಾಂಗ, ಆದಿ ಕರ್ನಾಟಕ, ಪಂಚಮರು, ಅಂತ್ಯಜರು, ಚಾಂಡಾಳರು, ಹೊಲೆಯರು, ಮಾದಿಗರು, ಪಾಡೆವಾರರು, ಅಂತ್ಯವ್ಯವಸಾಯಿ, ಅತೀ ಶೂದ್ರ, ಧಸ್ಯು, ಹರಿಜನ ಮುತಾಂದ ಪದಗಳು ಅವರ ವೃತ್ತಿ ಹಾಗೂ ಇರುವಿಕೆಯನ್ನು ಸೂಚಿಸುವ ಪದಗಳಾಗಿದ್ದವು ಹಾಗೂ ಸಮಾಜಿಕ ಜೀವನದಲ್ಲಿ ಅವಹೇಳನಕ್ಕೀಡು ಮಾಡುವಂತವು ಆಗಿದ್ದವು. ಈ ಪದಗಳಿಂದಾಗುವ ಮಾನಸಿಕ ಹಿಂಸೆಯಿಂದ ಅಸ್ಪøಶ್ಯರು ಬಿಡುಗಡೆ ಬಯಸುತ್ತಿದ್ದದ್ದು ಸಹಜವೇ ಆಗಿದೆ. ಸಾವಿರಾರು ವರ್ಷಗಳಿಂದ ದಲಿತರು ಅನುಭವಿಸಿದ ದಾರಿದ್ರ್ಯ - ದಾಸ್ಯ ಮತ್ತು ಅವರು ಪಟ್ಟ ಪಾಡುಗಳೆಲ್ಲ ಹಾಡಾಗಿ ಹೊರಹೊಮ್ಮುತ್ತಿದ್ದವು. ಅವರು ತಮ್ಮ ಹಕ್ಕುಗಳಿಗಾಗಿ ಹೊರಾಟಕ್ಕೆ ಇಳಿಯುತ್ತಿದ್ದಂತೆ ದಲಿತ ಸಾಹಿತ್ಯವಲಯಕ್ಕೆ ಕಿರಿಕಿರಿ ಎನಿಸಿದ್ದು ಸೋಜಿಗವಲ್ಲ. ಶತ ಶತಮಾನಗಳಿಂದ ಶೋಷಣೆಗೆ ಒಳಗಾದ ದಲಿತರು ಎಚ್ಚೆತ್ತುಕೊಂಡರು. ಮೇಲವರ್ಗದವರ ಅನ್ಯಾಯ ಅತ್ಯಾಚಾರಗಳ ವಸ್ತು ಸ್ಥಿತಿ ಬಹಿರಂಗಗೊಳಿಸಲು ಅವರ ಸಮಾಜ ವಿರೋಧಿ ಮೌಲ್ಯಗಳನ್ನು ಪ್ರತಿಭಟಿಸಲು ದಲಿತ ಸಾಹಿತಿಗಳು ಸಂಗ್ರಾಮ ರಂಗಕ್ಕಿಳಿದರು. ಇವರು ರಚಿಸಿದ ಸಾಹಿತ್ಯ ತನ್ನದೇ ಸಿದ್ದಾಂತಗಳಿಂದ ಪ್ರತಿಭಟನಾ ನಿಲುವಿನಿಂದ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಿಶೇಷ ಎನಿಸಿತು. ದಲಿತೇತರ ಲೇಖಕರು ಎಷ್ಟೇ ಬರೆದರು ಅದು ದಲಿತರ ಬಗೆಗಿನ ಅನುಕಂಪ ಸಾಹಿತ್ಯವಾಗುತ್ತದೆ. ದಲಿತ ವರ್ಗದ ವ್ಯಕ್ತಿ ತಾನು ಅನುಭವಿಸಿದ್ದನ್ನು ಮತ್ತು ಭೋಗಿಸಿದ್ದನ್ನು ಬರೆದರೆ ಅದು ಸ್ವಾನುಭವದ್ದೆನಿಸಿ ಹೆಚ್ಚು ಅಧಿಕೃತವೆನಿಸುತ್ತದೆ. ಮನುಷ್ಯನೇ ದಲಿತ ಸಾಹಿತ್ಯದ ಕೇಂದ್ರಬಿಂದು. ಅದಕ್ಕಾಗಿಯೇ ಮನುಷ್ಯರು ಮನುಷ್ಯರನ್ನು ಗೌರವಿಸದನ್ನು ಮನುಷ್ಯರಂತೆ ಬದುಕುವುದನ್ನು ಈ ಸಾಹಿತ್ಯ ಬಯಸುತ್ತದೆ. ಮನುಷ್ಯನ ವ್ಯಕ್ತಿತ್ವದ ಸಾರ್ವಾಂಗೀಣ ವಿಕಾಸವಾಗಲು ಮತ್ತು ಸುತ್ತಮುತ್ತಲಿನ ಸಂಕೋಲೆಗಳನ್ನು ತೆಗೆದು ಹಾಕಲು ಲೇಖಕ ವಿದ್ರೋಹದ ಹಾದಿಯನ್ನು ತುಳಿಯಬೇಕಾಗುತ್ತದೆ. ದಲಿತನು ತನ್ನ ದಯನೀಯ ಅವಸ್ಥೆಗೆ ಕಾರಣವಾಗುವ ಎಲ್ಲ ಅಂಶಗಳನ್ನು ಅಲ್ಲಗಳೆಯುತ್ತಾನೆ. ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ, ಅಸ್ಪøಶ್ಯತೆ, ಧರ್ಮ, ಶ್ರೀಮಂತಿಕೆ, ಜಮೀನುದಾರಿ, ಗುಲಾಮಗಿರಿ, ಹಿಂಸಾಪ್ರವೃತ್ತಿ, ಅಂಧಶ್ರದ್ದೆ, ಸಂಪ್ರಾದಯಿಕ ವಿದ್ಯೆ, ಅತ್ಯಾಚಾರ, ದೌರ್ಜನ್ಯ, ವಶೀಲಿ, ಬ್ರಷ್ಟತೆ, ಸ್ವಾರ್ಥ, ಸ್ವಜನ ಪಕ್ಷಪಾತ, ಧರ್ಮದೊಳಗಿನ ಕರ್ಮಠತೆ ಇವುಗಳನ್ನು ದಲಿತ ಸಾಹಿತ್ಯ ತಿರಸ್ಕರಿಸುತ್ತದೆ. ಮನುಷ್ಯರ ನಡುವೆ ಬೇಧವನ್ನು ಕಲ್ಪಿಸುವ ಮಡಿ ಮೈಲಿಗೆಯ ಗೊಡೆಗಳನ್ನು ನಿರ್ಮಿಸಿದುವುದನ್ನು ಈ ಸಾಹಿತ್ಯ ಸಹಿಸುವುದಿಲ್ಲ. ಮನುಷ್ಯನ ಮಾನನಷ್ಟಗೊಳಿಸುವ ಜಾತಿವ್ಯವಸ್ಥೆ, ವರ್ಣವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಹಾಗೆಯೆ ಮನುಷ್ಯ ಶ್ರೇಷ್ಠತೆಯ ಸೂತ್ರವನ್ನು ಸ್ವೀಕರಿಸುತ್ತದೆ. ಮನುಷ್ಯರೊಳಗಿನ ಮೇಲು ಕೀಳೆಂಬ ಭಾವನೆಯನ್ನು ತಿರಸ್ಕರಿಸಿ ಮಾನವೀಯತೆ, ಸಮತೆಯನ್ನು ಸ್ವೀಕರಿಸುವ ಜೊಡು ಜವಾಬ್ದಾರಿ ಈ ಸಾಹಿತ್ಯಕ್ಕಿದೆ. ಭೂತಕಾಲದ ಪರಂಪರೆಯಿಂದ ಬೇರೂರಿದ ಅನಿಷ್ಟ ಪದ್ಧತಿಗಳನ್ನು ತಿರಸ್ಕರಿಸಿ ಒಮ್ಮೆಲೆ ಹೊಸ ಜೀವನ ಆರಂಭಿಸುವುದು ಸುಲಭದ ಕೆಲಸವಲ್ಲ ಅದಕ್ಕಾಗಿ ದಲಿತ ಲೇಖಕ ವರ್ತಮಾನದ ಜೊತೆ ಸತತ ಸಂಘರ್ಷ ಮಾಡಬೇಕಾಗುತ್ತದೆ. ಆಧುನಿಕತೆ ಸ್ವೀಕರಿಸದ ಮನುಷ್ಯ ಪರಂಪರಾಗತ ಜಡತೆಯ ವಿರುದ್ಧ ಬಂಡೇಳೆವುದು ಅವಶ್ಯವಾಗಿದೆ. ಆದರೆ ಸಮಾಜದ ಇಂಥ ಪ್ರಾಮಾಣಿಕವಾದ ಪ್ರತಿಭಟನೆ ನಡೆದೆ ಇಲ್ಲವೆಂಬುವುದು ಕೆಲವರ ವಾದ. ಹೊರಗೆ ಬದಲಾವಣೆಯ ವೇಷ ಧರಿಸಿದರು. ಒಳಗೆ ಮೊದಲಿನ ಸ್ಥಿತಿಯನ್ನು ಮುಂದುವರೆಸಿಕೊಂಡು ನಡೆಯುವ ಡಾಂಭಿಕತೆ ಎಲ್ಲಡೆಯು ಕಾಣುತ್ತಿದೆ. ಇದು ದಲಿತ ಸಾಹಿತ್ಯಕ್ಕೆ ದೊಡ್ಡ ಸವಾಲು ಎನ್ನುತ್ತಾರೆ ಬಾಲಚಂದ್ರ ಫಡಕೆ. ಮನುಷ್ಯರನ್ನು ಕೆಳವರ್ಗಕ್ಕೆ ತಳ್ಳುವ ಆರ್ಥಿಕ ಅಸಮಾನತೆಯನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಕೆಂಬುದನ್ನು ಅಲಕ್ಷ್ಯಿಸುವಂತಿಲ್ಲ. ಆದರೆ ದಯಾ ಪವಾರ ಮುಂತಾದ ಲೇಖಕರು ಆರ್ಥಿಕ ಪ್ರಶ್ನೆಗಿಂತ ಮನುಷ್ಯರಂತೆ ಬದುಕುವ ಅಧಿಕಾರದ ಪ್ರಶ್ನೆ ತಮಗೆ ಮಹತ್ವದೆನಿಸುತ್ತದೆ ಎನ್ನುತ್ತಾರೆ. ದಲಿತ ಸಾಹಿತ್ಯವು ಮನುಷ್ಯ ಶ್ರೇಷ್ಠತೆ ಮನ್ನಿಸುವ ವಿಚಾರ ಪ್ರಣಾಳಿಕೆಗೆ ಬದ್ಧವಾಗಿರುತ್ತದೆ. ಎಂಬ ವಾದ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ದಲಿತ ಸಾಹಿತ್ಯವು ಜೀವನ ಮೌಲ್ಯಗಳಿಗೆ ಬದ್ಧವಾಗಿರುವಂತಹದ್ದು. ಮನುಷ್ಯತ್ವಕ್ಕೆ ಧಕ್ಕೆ ಬರುವುದನ್ನು ಅನ್ಯಾಯವಾಗುವುದನ್ನು ಈ ಸಾಹಿತ್ಯ ಸಹಿಸುವುದಿಲ್ಲ. ದೀನ-ದುರ್ಬಲರ ಅಸ್ಪøಶ್ಯ - ಅಮಾಯಕರ ಕಂಬನಿಯ ಧ್ವನಿ ಈ ಸಾಹಿತ್ಯದಲ್ಲಿ ಪ್ರಕಟವಾಗುತ್ತದೆ. ದಲಿತ ಸಾಹಿತ್ಯವು ಚಳುವಳಿ ಮೂಲಕವೆ ಜನ್ಮ ತಳೆದಿರುವಂತದ್ದು. ಎಲ್ಲ ದಲಿತ ಆದಿವಾಸಿ, ಭಿಕ್ಷುಕ, ಅಪರಾಧಿ ಮತ್ತು ವರ್ಣ ಜಾತಿಗಳ ವ್ಯವಸ್ಥೆಗೆ ಬಲಿಯಾಗಿರುವ ಎಲ್ಲ ಅಪೇಕ್ಷಿತರನ್ನು ಈ ಸಾಹಿತ್ಯ ತನ್ನ ಚಳುವಳಿಯ ನಾಯಕರೆಂದು ಸ್ವೀಕರಿಸುತ್ತದೆ. ಅಸ್ಪøಶ್ಯರಿಗೆ ಮನುಷ್ಯತ್ವದ ಪ್ರತಿಷ್ಠೆಯನ್ನು ದೊರಕಿಸಿಕೊಡಲು ಈ ಸಾಹಿತ್ಯ ದಲಿತರ ಹೊರಾಟದ ನೇತೃತ್ವವಹಿಸಿದೆ. ಅಂಬೇಡ್ಕರ, ಬುದ್ಧ, ಮಾಕ್ರ್ಸ, ಇವರ ತತ್ವಜ್ಞಾನವನ್ನು ಅರಗಿಸಿಕೊಂಡು ರೂಪತಾಳುವ ಈ ಸಾಹಿತ್ಯವು ಸಮಾನತೆಯ ನವಸಮಾಜದ ರಚನೆಗಾಗಿ ಚಳುವಳಿಯನ್ನು ಜಾರಿಯಲ್ಲಿಯಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾವಿರಾರು ವರ್ಷ ಉಸಿರುಗಟ್ಟುವ ವಾತಾವರಣದಲ್ಲಿ ಬದುಕಿದ ದಲಿತ ತನ್ನ ಅಧೋಗತಿಯ ಕಾರಣಗಳನ್ನು ತಿಳಿದು ಸವರ್ಣೀಯರ ದಬ್ಬಾಳಿಕೆಯ ತಳಮಳವನ್ನು ತಾಳಲಾರದೆ ಬರೆಯುವಾಗ ಕ್ರೋಧ, ಆವೇಶ-ಆಕ್ರೋಶಗಳು ಶಬ್ಧ ರೂಪತಾಳುತ್ತೇವೆ. ದೇವನೂರು ಮಹಾದೇವ, ಸಿದ್ಧಲಿಂಗಯ್ಯನವರ ಕೃತಿಗಳಲ್ಲಿ ಲೇಖಕ ತಾನು ಹುಟ್ಟಿ ಬೆಳೆದು ಬಂದ ಸಮಾಜದಲ್ಲಿರುವ ಅಥವಾ ತಾನು ಅನುಭವಿಸಿದ್ದ ತನ್ನ ಅನುಭವಕ್ಕೆ ದಕ್ಕಿದ ಶೋಷಣೆಯ ವಿವರಗಳನ್ನು ದಲಿತರ ಮುಂದಿಡುತ್ತಾ ದಲಿತೇತರಿಗೆ ತಿಳಿಯಪಡಿಸಲು ಬಯಸುತ್ತಾನೆ. ಆದ್ದರಿಂದ ಸಹಜವಾಗಿ ಸಿದ್ಧಲಿಂಗಯ್ಯನವರ ಸಿಟ್ಟು, ಆಕ್ರೋಶ ಅನಿಯಂತ್ರಿತವಾಗಿ ಅಭಿವ್ಯಕ್ತವಾಗುತ್ತದೆ. “ಇಕ್ರಲಾ ಇದಿರ್ಲಾ ಈ ಸೂಳೆ ಮಕ್ಕಳ ಮೂಳೆ ಮುರೀರ್ಲಾ” ನೋವುಂಡ ಒಡಲಕಿಚ್ಚಿನ ನುಡಿಗಳು ಹೀಗೆ ಹಾಡಾಗಿ ಹೊರಹೊಮ್ಮುವುದು ಸಹಜವಾಗಿದೆ. ದಲಿತ ವರ್ಗದ ಮೇಲಿನ ಅನ್ಯಾಯಗಳಿಗೆ ಮೂಲವಾಗಿರುವ ಸಮಾಜಿಕ, ಧಾರ್ಮಿಕ ಮೊದಲಾದ ಪಾರಂಪರಿಕ ಮೌಲ್ಯಗಳನ್ನು ಪ್ರಶ್ನಿಸುತ್ತಾ ಅವುಗಳ ಟೊಳ್ಳೂತನವನ್ನು ಬೇಧಿಸಿವುದು ದಲಿತ ಸಾಹಿತ್ಯದಲ್ಲಿ ಎದ್ದು ಕಾಣುವ ಅಂಶವಾಗಿದೆ. ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು ಡಾ. ಅರವಿಂದ ಮಾಲಗತ್ತಿಯವರ ‘ಮೂಕನಿಗೆ ಬಾಯಿ ಬಂದಾಗ’ ಕವನ ಸಂಕಲನಗಳು ಈ ದೃಷ್ಟಿಯಿಂದ ಮಾದರಿ ಎನಿಸುತ್ತವೆ. ಆಕರ ಗ್ರಂಥಗಳು :- 1. ಸಾಂಸ್ಕøತಿ ದಂಗೆ : ಅರವಿಂದ ಮಾಲಗತ್ತಿ : ರಾಜ ಪ್ರಕಾಶನ : 2004. 2. ಜಾನಪದ ಕರ್ನಾಟಕ : ಡಾ.ಸ.ಚಿ.ರಮೇಶ್ : ಕನ್ನಡ ವಿಶ್ವವಿದ್ಯಾಲಯ, ಹಂಪಿ : 2005. 3. ದಲಿತ ಜಗತ್ತು : ಪುರುಷೋತ್ತಮ ಬಿಳಿಮಲೆ. 4. ದಲಿತ ಚಳವಳಿ ಮತ್ತು ಸಂವೇದನಾಶೀಲತೆ : ಯು.ಆರ್.ಅನಂತಮೂರ್ತಿ. 5. ದಲಿತ ಸಾಹಿತ್ಯ : ಚಂಡಾಳ ಗಂಗಾರಾಮ.