ಗಂಧರ್ವಸೇನೆ
ಕಾವ್ಯ ಹೆಚ್.
ಪ್ರಥಮ ಬಿ.ಎ. (ಹೆಚ್.ಇ.ಕೆ.)
ಜಿ.ಎಫ್.ಜಿ.ಸಿ., ತುಮಕೂರು.
kavyamkpvg2000@gmail.com Ph: 7676366426
ಒಂದು ದಿನ ಒಬ್ಬ ರಾಜ ಒಡ್ಡೋಲಗದಲ್ಲಿದ್ದಾಗ ಅವನ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ಅವನ ರೋದನಕ್ಕೆ ಕಾರಣವೇನೆಂದು ರಾಜ ಪ್ರಶ್ನಿಸಿದ. ಮಂತ್ರಿಯು ಸಿಂಹಾಸನವನ್ನು ಚುಂಬಿಸಿ ಭೂಮಿಯನ್ನು ಮುಟ್ಟಿ ನಮಸ್ಕರಿಸಿ ತನ್ನ ನಾಲಗೆಯನ್ನು ಉದ್ದ ಮಾಡಿ “ಮಹಾರಾಜರೇ ಗಂಧರ್ವಸೇನರು ತೀರಿಕೊಂಡರಂತೆ” ಎಂದು ಉದ್ಗರಿಸುತ್ತಾ ಮೂರ್ಛೆಹೋದ. ರಾಜನು ಒಡ್ಡೋಲಗವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತಾ ಗಂಧರ್ವಸೇನರ ಆತ್ಮಶಾಮತಿಗಾಗಿ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದ. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದ ರಾಜ. ಅಲ್ಲಿಯು ಕರುಳು ಕಿತ್ತು ಬರುವಂತೆ ಅಳತೊಡಗಿದ ರಾಣಿಯರು ಅವನ ಶೋಕಕ್ಕೆ ಕಾರಣವನ್ನು ಕೇಳಿದರು.
“ಗಂಧರ್ವಸೇನರು ತೀರಿಕೊಂಡರು” ಎಂದು ರಾಜ ಗದ್ಗದ ಕಂಠದಿಂದ ಹೇಳಿದಾಗ ರಾಜನ ದುಃಖ ತಮ್ಮ ದುಃಖ ಎಂದು ಅವರೂ ಕೂಡ ಕರಳು ಹಿಂಡುವಂತೆ ಎದೆ ಬಡಿದುಕೊಂಡು ಅಳಲಾರಂಭಿಸಿದರು. ಇಡೀ ಅಂತಃಪುರ ದುಃಖ ಹಾಗೂ ಗೊಂದಲಗಳಿಂದ ತುಂಬಿತು.
ರಾಣಿಯ ಸೇವಕಿಯೊಬ್ಬಳಿಗೆ ಈ ಎಲ್ಲಾ ಗೊಂದಲ ಏಕೆಂದು ತಿಳಿಯಲಿಲ್ಲ. ಅವಳು “ಮಹಾರಾಣಿಯವರೇ ಎಲ್ಲರೂ ಏಕೆ ಅಳುತ್ತಿದ್ದಾರೆ?” ಎಂದು ಕೇಳಿದಳು. ರಾಣಿ ನಿಟ್ಟುಸಿರುಬಿಟ್ಟು “ಪಾಪ! ಗಂಧರ್ವಸೇನರು ತೀರಿಕೊಂಡರಂತೆ” ಎಂದಳು. ಸೇವಕಿ ಚುರುಕು ಬುದ್ಧಿಯವಳು ಅವಳು ಆಲೋಚನೆ ಮಾಡಿದಳು. ಈ ನಮ್ಮ ಮಹಾರಾಜರಿಗೂ ಆ ಗಂಧರ್ವಸೇನರಿಗೂ ಏನ್ ಸಂಬಂಧ? ಎಂದು ಆತಂಕದಿಂದ ರಾಣಿಯ ಬಳಿ ಕೇಳಿದಳು. ಅದು ನನಗೆ ಗೊತ್ತಿಲ್ಲವೆಂದು ನುಡಿದು ರಾಜನ ಬಳಿಗೆ ಓಡಿಹೋಗಿ “ ಗಂಧರ್ವಸೇನರು ಯಾರು? ಎಂದು ಕೇಳಿದಳು. ರಾಜನಿಗೂ ಗೊತ್ತಿಲ್ಲ. ಆತ ಕಣ್ ಕಣ್ ಬಿಟ್ಟು “ತಾನೆಂಥ ಮೂರ್ಖತನದ ಕೆಲಸ ಮಾಡಿದೆ” ಅಂದುಕೊಂಡು ಕೂಡಲೇ ಆಸ್ಥಾನಕ್ಕೆ ತೆರಳಿದ. ಈಗಾಗಲೇ ವೈದ್ಯರ ಉಪಚಾರದಿಂದ ಸುಧಾರಿಸಿಕೊಂಡಿದ್ದ ಮಂತ್ರಿಯನ್ನು ಕರೆಸಿಕೊಂಡು “ಮಂತ್ರಿಗಳೇ ಯಾರು ಈ ಗಂಧರ್ವ ಸೇನ?” ಎಂದು ಪ್ರಶ್ನಿಸಿದ. “ಮಹಾರಾಜರೇ ದಯವಿಟ್ಟು ಕ್ಷಮಿಸಿ ಗಂಧರ್ವಸೇನ ಯಾರೆಂಬುದು ನನಗೂ ತಿಳಿದಿಲ್ಲ. ಆದರೆ ಪಡೆಯ ಮುಖ್ಯಸ್ಥನು ಗಂಧರ್ವಸೇನ ತೀರಿಕೊಂಡರೆಂದು ಗಟ್ಟಿಯಾಗಿ ಗಂಟಲು ಹರಿಯುವಂತೆ ಕೂಗುತ್ತಾ ಅಳುತ್ತಿರುವುದನ್ನು ಕಂಡು ನಾನೂ ಅತ್ತೆ” ಎಂದು ಮಾರ್ನುಡಿದ. ರಾಜನ ಕೋಪ ನೆತ್ತಿಗೇರಿತು. ನೀನೊಬ್ಬ ಮೂರ್ಖ ಕೂಡಲೇ ಹೋಗಿ ಗಂಧರ್ವಸೇನ ಯಾರೆಂದು ಪತ್ತೆ ಮಾಡಿಕೊಂಡು ಬಾ” ಎಂದ. ಮಂತ್ರಿಗೆ ರಾಜ ಹೇಳಿದ, ಮಂತ್ರಿ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ ಮುಖ್ಯಸ್ಥನನ್ನು ಕಂಡು ಗಂಧರ್ವಸೇನರು ಯಾರು? ಎಂದು ಪ್ರಶ್ನಿಸಿದ ಸ್ವಾಮಿ ಅವರು ಯಾರು? ಏನಾಗಿದ್ದಾರೆ? ಎಂದು ನನಗೆ ತಿಳಿಯದು. ಆದರೆ ಅವರು ತೀರಿಕೊಂಡರೆಂದು ಸ್ವತಃ ನನ್ನ ಹೆಂಡತಿಯೇ ಅಳುತ್ತಿದ್ದಳು. ಈ ಸುದ್ಧಿಯನ್ನು ನಿಮಗೆ ಹೇಳಬೇಕೆಂದು ಅನಿಸಿತು. ಆದ್ದರಿಂದ ಬಂದು ಹೇಳಿದೆ” ಎಂದನು. ಮಂತ್ರಿ ತಲೆಯ ಮೇಲೆ ಕೈಹೊತ್ತು ಕುಳಿತ ಇರಲಿ ಇವನ ಹೆಂಡತಿಯನ್ನು ವಿಚಾರಿಸೋಣ ಎಂದು ಇಬ್ಬರೂ ಆತನ ಮನೆಗೆ ಹೋಗಿ “ಯಾರಮ್ಮ ಈ ಗಂಧರ್ವಸೇನ? ಎಂದು ಕೇಳಿದರು. ಅವಳು ಸ್ವಾಮಿ ಗಂಧರ್ವಸೇನರ ಪರಿಚಯ ನನಗಿಲ್ಲ. ಈ ದಿವಸ ಬೆಳಗ್ಗೆ ಸ್ನಾನ ಮಾಡಲಿಕ್ಕೆ ಕೆರೆಗೆ ಹೋಗಿದ್ದೆ ಅಲ್ಲಿ ಮಡಿವಾಳ್ತಿ ತನ್ನ ಗಂಧರ್ವ ಸೇನ ಸತ್ತಿದ್ದಾನೆಂದು ಬಾಯಿ ಬಡಿದುಕೊಂಡು ಒಂದೇ ಸಮನೆ ಅಳುತ್ತಿದ್ದಳು. ಅದನ್ನೂ ನೋಡಿ ನಾನು ಅತ್ತೆ ಗಂಡನ ಬಳಿ ಹೇಳಿದೆ” ಎಂದಳು. ಮಂತ್ರಿಗೆ ತಲೆಸುತ್ತಿದಂತಾಯ್ತು.
ಈ ಗಂಧರ್ವಸೇನ ಯಾರು? ತಲೆತಲೆ ಚಚ್ಚಿಕೊಂಡ. ಏನೇ ಆಗಲಿ ಎಂದುಕೊಂಡು ಅವರೆಲ್ಲರೂ ಆ ಮಡಿವಾಳ್ತಿ ಮನೆಗೆ ಹೋಗಿ “ಗಂಧರ್ವಸೇನ ಯಾರು?”ಎಂದು ಕೇಳಿದಳು. ಅವಳು ದುಃಖಿಸತೊಡಗಿದಳು. “ಸ್ವಾಮಿ ನನಗೆ ಅದೃಷ್ಟವಿಲ್ಲ ಈಗಲೂ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿದೆ. ಗಂಧರ್ವಸೇನ ನನ್ನ ಪ್ರೀತಿಯ ಕಡೆ ನನ್ನ ಮಗನಿಗಿಂತಲೂ ಹೆಚ್ಚಾಗಿ ಅವನನ್ನು ಮುದ್ದಿನಿಂದ ಬೆಳೆಸಿದ್ದೆ ನಮ್ಮ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಸ್ವಾಮಿ ನೆನ್ನೆ ರಾತ್ರಿ ಕಣ್ಣು ಮುಚ್ಕೊಂಬಿಟ್ಟ, ನನ್ನ ಹೊಟ್ಟೆ ಮೇಲೆ ಕಲ್ಹಾಕ್ಬಿಟ್ಟ ಎಂದು ಬೊಬ್ಬಿಟ್ಟು ಅತ್ತಳು. ಇದನ್ನು ಕೇಳಿದ ಮಂತ್ರಿ ಮುಖ್ಯಸ್ಥ ಅವನ ಹೆಂಡತಿ ಒಬ್ಬರ ಮುಖ ಒಬ್ಬರು ನೋಡಿಕೊಂಡು ಅಲ್ಲಿಂದ ಕಂಬಿ ಕಿತ್ತರು. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶವನ್ನು ಹೇಳಿದ. “ಗಂಧರ್ವಸೇನರು ಸತ್ತರೆಂದು ನಾವೆಲ್ಲಾ ಶೋಕಿಸಿದೆವಲ್ಲ ಅದು ಬೇರೆ ಯಾರು ಅಲ್ಲ: ಮಡಿವಾಳ್ತಿಯ ಪ್ರೀತಿಯ ಕತ್ತೆ” ಎಂದು ಹೇಳಿದ. ರಾಜ ಅವನಿಗೆ ಹಿಗ್ಗಾಮುಗ್ಗ ಬೈದರು. ಆದರೆ ಶಿಕ್ಷಿಸದೇ ಬಿಟ್ಟು ಬಿಟ್ಟ ಈ ಸುದ್ಧಿ ಅಂತಃಪುರದ ರಾಣಿಯ ಕಿವಿಗೂ ಮುಟ್ಟಿತು. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು ಎನ್ನುವರಂತೆ ರಾಜ ಮತ್ತು ಆಸ್ಥಾನಿಕರ ಮೂರ್ಖತನಕ್ಕಾಗಿ ರಾಣಿಯರು ನಮ್ಮ ಪಕ್ಕೆಲುಬುಗಳು ನೋಯುವವರೆಗೂ ನಗುತ್ತಲೇ ಇದ್ದರು.